Updated on: Jun 26, 2023 | 6:01 PM
ಅದು ಹೇಳಿ ಕೇಳಿ ಕೆಟ್ಟ ಬರ ಪೀಡಿತ ಪ್ರದೇಶ. ಜನ ಇಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಾರೆ. ಆದ್ರೆ ಇದೇ ಪ್ರದೇಶದಲ್ಲಿ ಒಂದು ಹಳ್ಳಿ ಇದೆ. ಇಲ್ಲಿ ಮನೆಗೊಂದು ಬೋರ್ ವೆಲ್. ಇನ್ನೂ ವಿಶೇಷ ಅಂದ್ರೆ ಇದೇ ಬೋರ್ (Borewell) ನೀರಿನಿಂದ ಈ ಜನ ಅಡಿಕೆ ಸಹ ಬೆಳೆಯುತ್ತಾರೆ! ಇಂತಹ ಸಮೃದ್ಧ ನೀರಿನ ಗ್ರಾಮಸ್ಥರಿಗೆ ಇದ್ದಕ್ಕಿದ್ದಂತೆ ಆತಂಕ ಶುರುವಾಗಿದೆ. ರಾತ್ರಿ ನಿದ್ರೆ ಬರುತ್ತಿಲ್ಲ. ನೀರು ಹೋದ್ರೆ ಮುಂದೆ ನಿದ್ರೆ ಶಾಶ್ವತವಾಗಿ ಹೋಗುತ್ತದೆ ಎಂಬ ಭಯ. ಇಷ್ಟಕ್ಕೂ ಇದಕ್ಕೆ ಕಾರಣ ಎನು ಇಲ್ಲಿದೆ ನೋಡಿ ಗಣಿಗಾರಿಕೆ (Manganese Mining) ಭೂತ ಸ್ಟೋರಿ.
ಎಲ್ಲಿ ನೋಡಿದರಲ್ಲಿ ಹಸಿರು ಪ್ರದೇಶ. ಸಮೃದ್ಧ ಪ್ರದೇಶ. ಗಾಳಿಗೆ ತಲೆ ಅಲ್ಲಾಡಿಸುತ್ತಿರುವ ಅಡಿಕೆ ಮರಗಳು. ತುಂಬಿ ತುಳುಕುತ್ತಿರುವ ಕೆರೆ. ಸ್ವಲ್ಪ ಗ್ರಾಮದ ಕಡೆ ಕಣ್ಣಾಡಿಸಿದಾಗ ಮನೆ ಮನೆಗಳಲ್ಲಿ ಮೂರು ನಾಲ್ಕು ಬೋರ್ ವೆಲ್ ಗಳನ್ನ ನೋಡಿದ್ರೆ ಅಚ್ಚರಿ.
ಇದೇ ಮನೆ ಬಳಿಯ ಬೋರ್ ವೆಲ್ ಗಳಿಂದ ಪೈಪ್ ಲೈನ್ ಮಾಡಿ ಮೂರರಿಂದ ಐದು ಕಿಲೋಮೀಟರ್ ಅಡಿಕೆ ತೋಟಕ್ಕೆ ತೆಗೆದುಕೊಂಡು ಹೋದ ರೈತರು ಇದ್ದಾರೆ. ಇದೊಂದು ಎಂದೂ ಬತ್ತದ ಬೋರ್ ವೆಲ್ ಗಳ ನೀರಿನ ಗ್ರಾಮ. ಅಂದಹಾಗೆ ನಾವು ಹೇಳುತ್ತಿರುವುದು ದಾವಣಗೆರೆ (Davanagere) ಜಿಲ್ಲೆಯ ಜಗಳೂರು (Jagalur) ತಾಲೂಕಿನ ಜಮಾಪುರ (Jamalpur) ಗ್ರಾಮದ ಬಗ್ಗೆ.
ಮೇಲಾಗಿ ಬರಪೀಡಿತ ಪ್ರದೇಶ ಎಂದು ಹೆಸರಾದ ಜಗಳೂರು ತಾಲೂಕಿನಲ್ಲಿ ಮಲೆನಾಡು ಮೀರಿಸುವ ಗ್ರಾಮ ಈ ಜಮಾಪುರ ಆಗಿದೆ. ಇಂತಹ ಸಮೃದ್ಧ ಗ್ರಾಮದ ಜನರಿಗೆ ಕೆಲ ದಿನಗಳಿಂದ ನೆಮ್ಮದಿ ಹಾಳಾಗಿದೆ. ಸರಿಯಾಗಿ ನಿದ್ದೆ ಬರುತ್ತಿಲ್ಲ. ಕಾರಣ ಮ್ಯಾಂಗನೀಸ್ ಅದಿರು ಪತ್ತೆಯಾಗಿದೆ. ಉತೃಷ್ಠ ಮಟ್ಟದ ಖನಿಜ ಸಂಪತ್ತು ಇರುವುದು ಕೆಲ ಸ್ಥಿತಿವಂತರಿಗೆ ಗೊತ್ತಾಗಿತ್ತು.
ಖನಿಜ ಇರುವುದನ್ನು 10-15 ವರ್ಷಗಳ ಹಿಂದೆಯೇ ಪತ್ತೆ ಮಾಡಿ ಕೆಲವರು ಗಣಿಗಾರಿಕೆಗೆ ಮುಂದಾಗಿದ್ದರು. ಆದರೆ ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿ ಹೋಗಿದ್ದರು. ಈಗ ಮತ್ತೆ ಗಣಿಗಾರಿಕೆ ಶುರುವಾಗಲಿದೆ ಎಂಬ ಭೀತಿ ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ಗ್ರಾಮದ ಮೇಲಿನ ಪ್ರದೇಶದಲ್ಲಿ ಆಗಾಗ ಅಲ್ಲಲ್ಲಿ ಭೂಮಿಯನ್ನು ಅಗೆದಿರುವ ಘಟನೆಗಳು ನಡೆಯುತ್ತಲೇ ಇವೆ.
ಅರಣ್ಯ ಇಲಾಖೆಗೆ ಸೇರಿದ ಗುಡ್ಡದಲ್ಲಿ ಅದಿರು ಅಗೆಯಲಾಗಿದೆ. ಇದಕ್ಕೆ ಗ್ರಾಮಸ್ಥರಿಗೆ ಏನು ನಷ್ಟ ಅಂತೀರಾ? ಆದ್ರೆ ಈ ಗುಡ್ಡದ ಪಕ್ಕದ ಕೆ6ರೆಯೇ ಗ್ರಾಮಸ್ಥರಿಗೆ ಜೀವಂತವಾಗಿ ಇರಲು ಕಾರಣ. ಕೆರೆ ಇರುವುದರಿಂದ ಅಂತರ್ಜಲ ಸಮೃದ್ಧವಾಗಿದೆ. ಹೀಗೆ ಸಮೃದ್ಧವಾಗಿದ್ದ ಕಾರಣಕ್ಕಾಗಿಯೇ ಇಲ್ಲಿನ ಬೋರ್ ವೆಲ್ ಗಳಲ್ಲಿ ಭರ್ಜರಿ ನೀರಿದೆ.
ಈ ನೀರಿನಿಂದಲೇ ಇದೊಂದು ಬರದ ನಾಡಿನಲ್ಲಿ ಮಲೆನಾಡು ಎಂಬಂತಾಗಿದೆ. ಗಣಿಗಾರಿಕೆ ಆರಂಭವಾದರೆ ಎಲ್ಲವು ಸರ್ವನಾಶವಾಗುತ್ತದೆ. ಕೆರೆಗೆ ನೀರು ಸಹಿತ ಹೋಗಿ ಬಿಡುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿದ ಅಡಿಕೆ ಮರಗಳು ಸರ್ವನಾಶವಾಗುತ್ತವೆ. ಕೃಷಿ ಸರ್ವನಾಶವಾದ್ರೆ ಬದುಕು ನಡೆಸುವುದು ಕಷ್ಟ. ಗುಳೆ ಹೋಗಿ ಜೀವನ ನಡೆಸಬೇಕಾಗುತ್ತದೆ. ನಮ್ಮ ಪ್ರಾಣ ಹೋದರೂ ಗಣಿಗಾರಿಕೆ ಮಾಡಲು ಬಿಡಲ್ಲ ಎಂದು ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ.
ಯಾರಾದ್ರು ಮನೆಯಲ್ಲಿ ಅಡಿಗೆ ಮಾಡಲು ನಾಲ್ಕು ಸೌದೆ ತೆಗೆದುಕೊಂಡು ಹೋದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಕೇಸ್ ಮಾಡಿ ಜೈಲಿಗೆ ಕಳುಹಿಸುತ್ತಾರೆ. ಆದ್ರೆ ಮ್ಯಾಂಗನೀಸ್ ಲೂಟಿಗೆ ಬಂದವರ ಬಗ್ಗೆ ಮೌನ ವಹಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ. ಆದ್ರೆ ಪ್ರಭಾವಿಗಳು ಇಲ್ಲಿ ಬಳ್ಳಾರಿ ಮಾದರಿಯಲ್ಲಿ ಗಣಿಗಾರಿಕೆ ಆರಂಭಿಸಿದ್ರೆ ಅಚ್ಚರಿ ಪಡಬೇಕಾಗಿಲ್ಲ. ಇದೇ ಕಾರಣಕ್ಕೆ ಸಮೃದ್ಧ ಗ್ರಾಮದಲ್ಲಿ ಆತಂಕ ಸುರುವಾಗಿದೆ.