Please enable javascript.ವರ್ಷದ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರಿದ ದೇವೇಂದ್ರಪ್ಪಗೆ ಜಗಳೂರು ಟಿಕೆಟ್ - devendrappa bags congress ticket of jagalur of karnataka election 2023 - Vijay Karnataka

ವರ್ಷದ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರಿದ ದೇವೇಂದ್ರಪ್ಪಗೆ ಜಗಳೂರು ಟಿಕೆಟ್

Edited byಗಣೇಶ್ ಪ್ರಸಾದ್ ಕುಂಬ್ಳೆ | Vijaya Karnataka Web 15 Apr 2023, 9:18 pm
Subscribe

ವರ್ಷದ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಬಿ.ದೇವೇಂದ್ರಪ್ಪ ಅವರಿಗೆ ಜಗಳೂರು ಕ್ಷೇತ್ರದ ಟಿಕೆಟ್ ದೊರೆತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡಿರುವ ಅವರು ಟಿಕೆಟ್ ಸಿಕ್ಕಿದೆ ಎಂದು ನಾನು ಮೈ ಮರೆಯುವುದಿಲ್ಲ, ಟಿಕೆಟ್ ಕೊಟ್ಟ ಕಾಂಗ್ರೆಸ್ ಮುಖಂಡರನ್ನು, ನನಗೆ ಬೆಂಗಾವಲಾಗಿ ನಿಂತ ಎಲ್ಲ ನಾಯಕರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವೆ ಎಂದು ತಿಳಿಸಿದ್ದಾರೆ.

ಹೈಲೈಟ್ಸ್‌:

  • ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರಿಗೆ ದಾವಣಗೆರೆ ಜಿಲ್ಲೆ ಜಗಳೂರು ಟಿಕೆಟ್
  • ಕಳೆದ ವರ್ಷವಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮುಖಂಡ
  • ಅಸಮಾಧಾನಿತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವೆ ಎಂದ ದೇವೇಂದ್ರಪ್ಪ
devenkdrappa
ಬಿ.ದೇವೇಂದ್ರಪ್ಪ

ಜಗಳೂರು (ದಾವಣಗೆರೆ): ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರ ಹೆಸರು ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಫೈನಲ್ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟ್ಟಣದ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಕರೆದಿದ್ದ ಸಭೆಯಲ್ಲೇ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸಭೆ ಮುಗಿದ ನಂತರ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ದಿಢೀರನೆ ದೇವೇಂದ್ರಪ್ಪ ಅವರ ನಿವಾಸದಲ್ಲಿ ಪ್ರತ್ಯಕ್ಷರಾಗಿ ಹೂವಿನ ಹಾರ, ನಿಂಬೆಹಣ್ಣು ಕೊಟ್ಟು ಅಭಿನಂದನೆ ಸಲ್ಲಿಸಿದರು.

ವರ್ಷದ ಹಿಂದೆ ಕೈ ಹಿಡಿದಿದ್ದರು

ಕೇವಲ ಒಂದು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡ ಅವರು ಈಗ ಅಪಾರ ಅಭಿಮಾನಿಗಳು, ಕಾರ್ಯಕರ್ತರನ್ನು ಹೊಂದಿದ್ದಾರೆ. ಅಸಮಾಧಾನಿತರ ರೆಬಲ್ ಮುಖಂಡರನ್ನು, ನ್ಯೂಟ್ರಲ್ ಮುಖಂಡರನ್ನು ಮತ್ತು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರನ್ನು ಒಟ್ಟಿಗೆ ಕೊಂಡೊಯ್ಯುವ ಕಾರ್ಯಕ್ಕೆ ತಮ್ಮದೇ ಆದ ರಣ ತಂತ್ರ ರೂಪಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಟಿಕೆಟ್ ಸಿಕ್ಕಿದೆ. ಹಾಗಂತ ನಾನು ಮೈ ಮರೆಯಲ್ಲ. ಟಿಕೆಟ್ ಕೊಟ್ಟ ಕಾಂಗ್ರೆಸ್ ನಾಯಕರನ್ನು, ನನಗೆ ಬೆಂಗಾವಲಾಗಿ ನಿಂತ ಎಲ್ಲ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

16 ಕೆಜಿ ಚಿನ್ನ, 6 ಕ್ವಿಂಟಾಲ್‌ ಬೆಳ್ಳಿ, ₹152 ಕೋಟಿ ಆಸ್ತಿ ಘೋಷಿಸಿದ ಎಸ್‌.ಎಸ್‌. ಮಲ್ಲಿಕಾರ್ಜುನ್‌!
ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಚುನಾವಣಾ ತಯಾರಿಗೆ ಸಜ್ಜಾಗಿದ್ದೇನೆ. ನನಗೆ ಚುನಾವಣೆ ಹೊಸದೇನಲ್ಲ. ಹಿಂದೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ 14 ಸಾವಿರ ಮತ ಗಳಿಸಿದ್ದೆ. ಈ ಬಾರಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಲಭ್ಯವಾಗುತ್ತಿದ್ದಂತೆ ಅವರ ನಿವಾಸದಲ್ಲಿ ಅಭಿಮಾನಿಗಳು ಕಾರ್ಯಕತರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಅನೇಕ ಕಾರ್ಯಕರ್ತರು ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರಿಗೆ ಜೈಕಾರ ಕೂಗಿದರು.
ಜಗಳೂರಿನ ರಾಜಕೀಯ ಮೇಲಾಟ
ಪ್ರಸ್ತುತ ಜಗಳೂರಿನಲ್ಲಿ ರಾಜಕೀಯದ ಮೇಲಾಟವೂ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಪಕ್ಷಗಳು ಇಲ್ಲಿ ಅಷ್ಟಾಗಿ ನೆಲೆಯೂರಲು ಇದುವರೆಗೆ ಸಾಧ್ಯವಾಗಿಲ್ಲ.ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದವರು. ಎಚ್.ಪಿ. ರಾಜೇಶ್ ಬಿಜೆಪಿ ಮೂಲಕ ರಾಜಕಾರಣಕ್ಕೆ ಇಳಿದವರು. ಪ್ರಸ್ತುತ ಎಸ್.ವಿ. ರಾಮಚಂದ್ರ ಬಿಜೆಪಿಯಲ್ಲಿದ್ದರೆ, ಎಚ್.ಪಿ. ರಾಜೇಶ್ ಕಾಂಗ್ರೆಸ್‌ನಲ್ಲಿದ್ದರು.

ಮಾಯಕೊಂಡ ಕಾಂಗ್ರೆಸ್ ಟಿಕೆಟ್ ಫೈಟ್: ನಟಿ ಸವಿತಾಬಾಯಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರಿಂದ ಆತ್ಮಹತ್ಯೆಗೆ ಯತ್ನ, ಹೈಡ್ರಾಮಾ
2008ರಲ್ಲಿ ಶಾಸಕ ರಾಮಚಂದ್ರ ಕಾಂಗ್ರೆಸ್‌ನಿಂದ ಸ್ಫರ್ಧಿಸಿ ಗೆದ್ದು ಬಂದಿದ್ದರು. ನಂತರ ನಡೆದ ಆಪರೇಶನ್ ಕಮಲ’ ಬೆಳವಣಿಗೆಯಲ್ಲಿ ಅವರು ಬಿಜೆಪಿಯತ್ತ ವಾಲಿದರು. ಅಂತೆಯೇ 2011ರಲ್ಲಿ ಉಪಚುನಾವಣೆ ನಡೆಯಿತು. ಬಿಜೆಪಿಯಿಂದ ರಾಮಚಂದ್ರ ಸ್ಪರ್ಧಿಸಿದರೆ, ರಾಜೇಶ್ ಬಂಡಾಯ ಎದ್ದು ಪಕ್ಷೇತರನಾಗಿ ಸ್ಪರ್ಧಿಸಿದ್ದರು. ವೈ.ದೇವೇಂದ್ರಪ್ಪ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ರಾಮಚಂದ್ರ ಕೇವಲ 3,500 ಮತಗಳ ಅಂತರದಿಂದ ಗೆದ್ದು ಬಂದಿದ್ದರು. ರಾಜೇಶ್ 2ನೇ ಸ್ಥಾನ ಪಡೆದರೆ, ದೇವೇಂದ್ರಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರೂ, 28 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.

2013ರ ಚುನಾವಣೆಯಲ್ಲಿ ರಾಜೇಶ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ರಾಮಚಂದ್ರ ಕೆಜೆಪಿಯಿಂದ ಕಣಕ್ಕಿಳಿದಿದ್ದರು. ರಾಜೇಶ್ 37,000 ಮತಗಳ ಭಾರಿ ಅಂತರದಿಂದ ಗೆದ್ದು ಬಂದಿದ್ದರು. ರಾಮಚಂದ್ರ 2ನೇ ಸ್ಥಾನ ಪಡೆಯಬೇಕಾಯಿತು. ಇದೇ ಸಮಯದಲ್ಲಿ ಬಿಜೆಪಿಯ ಅಭ್ಯರ್ಥಿಗೆ 2,000 ಮತ ಕೂಡ ಸಿಕ್ಕಿರಲಿಲ್ಲ. ಬಿಜೆಪಿಗಿಂತ ಎರಡು ಪಟ್ಟು ಮತಗಳನ್ನು ಜೆಡಿಎಸ್ ಪಡೆದಿತ್ತು.
ಗಣೇಶ್ ಪ್ರಸಾದ್ ಕುಂಬ್ಳೆ
ಲೇಖಕರ ಬಗ್ಗೆ
ಗಣೇಶ್ ಪ್ರಸಾದ್ ಕುಂಬ್ಳೆ
ವಿಜಯ ಕರ್ನಾಟಕದಲ್ಲಿ ಡಿಜಿಟಲ್ ಪತ್ರಕರ್ತ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ. ಓದುವಿಕೆ, ಬರೆಯುವಿಕೆ, ಯಕ್ಷಗಾನದಲ್ಲಿ ಆಸಕ್ತಿ. ಸಮಯ ಸಿಕ್ಕಾಗ ಚೆಸ್, ಕ್ರಿಕೆಟ್, ಶಟಲ್ ಆಡುವುದು, ಪ್ರವಾಸ, ಚಾರಣ ಮಾಡುವುದು ನೆಚ್ಚಿನ ಹವ್ಯಾಸಗಳು. ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಬರಹಳೆಂದರೆ ಅಚ್ಚಮೆಚ್ಚು. ರಾಜಕೀಯ, ಕ್ರೀಡೆ, ಮಾನವೀಯ ಸಂವೇದಿ ಲೇಖನಗಳು, ವ್ಯಕ್ತಿಚಿತ್ರ, ನುಡಿಚಿತ್ರ, ಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ಆಸಕ್ತಿ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ