ಜಗಳೂರು (ದಾವಣಗೆರೆ): ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರ ಹೆಸರು ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಫೈನಲ್ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟ್ಟಣದ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಕರೆದಿದ್ದ ಸಭೆಯಲ್ಲೇ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸಭೆ ಮುಗಿದ ನಂತರ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ದಿಢೀರನೆ ದೇವೇಂದ್ರಪ್ಪ ಅವರ ನಿವಾಸದಲ್ಲಿ ಪ್ರತ್ಯಕ್ಷರಾಗಿ ಹೂವಿನ ಹಾರ, ನಿಂಬೆಹಣ್ಣು ಕೊಟ್ಟು ಅಭಿನಂದನೆ ಸಲ್ಲಿಸಿದರು.
ವರ್ಷದ ಹಿಂದೆ ಕೈ ಹಿಡಿದಿದ್ದರು
ಕೇವಲ ಒಂದು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಟಿಕೆಟ್ ಗಿಟ್ಟಿಸಿಕೊಂಡ ಅವರು ಈಗ ಅಪಾರ ಅಭಿಮಾನಿಗಳು, ಕಾರ್ಯಕರ್ತರನ್ನು ಹೊಂದಿದ್ದಾರೆ. ಅಸಮಾಧಾನಿತರ ರೆಬಲ್ ಮುಖಂಡರನ್ನು, ನ್ಯೂಟ್ರಲ್ ಮುಖಂಡರನ್ನು ಮತ್ತು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರನ್ನು ಒಟ್ಟಿಗೆ ಕೊಂಡೊಯ್ಯುವ ಕಾರ್ಯಕ್ಕೆ ತಮ್ಮದೇ ಆದ ರಣ ತಂತ್ರ ರೂಪಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಟಿಕೆಟ್ ಸಿಕ್ಕಿದೆ. ಹಾಗಂತ ನಾನು ಮೈ ಮರೆಯಲ್ಲ. ಟಿಕೆಟ್ ಕೊಟ್ಟ ಕಾಂಗ್ರೆಸ್ ನಾಯಕರನ್ನು, ನನಗೆ ಬೆಂಗಾವಲಾಗಿ ನಿಂತ ಎಲ್ಲ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಚುನಾವಣಾ ತಯಾರಿಗೆ ಸಜ್ಜಾಗಿದ್ದೇನೆ. ನನಗೆ ಚುನಾವಣೆ ಹೊಸದೇನಲ್ಲ. ಹಿಂದೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ 14 ಸಾವಿರ ಮತ ಗಳಿಸಿದ್ದೆ. ಈ ಬಾರಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಲಭ್ಯವಾಗುತ್ತಿದ್ದಂತೆ ಅವರ ನಿವಾಸದಲ್ಲಿ ಅಭಿಮಾನಿಗಳು ಕಾರ್ಯಕತರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಅನೇಕ ಕಾರ್ಯಕರ್ತರು ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರಿಗೆ ಜೈಕಾರ ಕೂಗಿದರು.
ಜಗಳೂರಿನ ರಾಜಕೀಯ ಮೇಲಾಟ
ಪ್ರಸ್ತುತ ಜಗಳೂರಿನಲ್ಲಿ ರಾಜಕೀಯದ ಮೇಲಾಟವೂ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಪಕ್ಷಗಳು ಇಲ್ಲಿ ಅಷ್ಟಾಗಿ ನೆಲೆಯೂರಲು ಇದುವರೆಗೆ ಸಾಧ್ಯವಾಗಿಲ್ಲ.ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದವರು. ಎಚ್.ಪಿ. ರಾಜೇಶ್ ಬಿಜೆಪಿ ಮೂಲಕ ರಾಜಕಾರಣಕ್ಕೆ ಇಳಿದವರು. ಪ್ರಸ್ತುತ ಎಸ್.ವಿ. ರಾಮಚಂದ್ರ ಬಿಜೆಪಿಯಲ್ಲಿದ್ದರೆ, ಎಚ್.ಪಿ. ರಾಜೇಶ್ ಕಾಂಗ್ರೆಸ್ನಲ್ಲಿದ್ದರು.
2008ರಲ್ಲಿ ಶಾಸಕ ರಾಮಚಂದ್ರ ಕಾಂಗ್ರೆಸ್ನಿಂದ ಸ್ಫರ್ಧಿಸಿ ಗೆದ್ದು ಬಂದಿದ್ದರು. ನಂತರ ನಡೆದ ಆಪರೇಶನ್ ಕಮಲ’ ಬೆಳವಣಿಗೆಯಲ್ಲಿ ಅವರು ಬಿಜೆಪಿಯತ್ತ ವಾಲಿದರು. ಅಂತೆಯೇ 2011ರಲ್ಲಿ ಉಪಚುನಾವಣೆ ನಡೆಯಿತು. ಬಿಜೆಪಿಯಿಂದ ರಾಮಚಂದ್ರ ಸ್ಪರ್ಧಿಸಿದರೆ, ರಾಜೇಶ್ ಬಂಡಾಯ ಎದ್ದು ಪಕ್ಷೇತರನಾಗಿ ಸ್ಪರ್ಧಿಸಿದ್ದರು. ವೈ.ದೇವೇಂದ್ರಪ್ಪ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದರು. ರಾಮಚಂದ್ರ ಕೇವಲ 3,500 ಮತಗಳ ಅಂತರದಿಂದ ಗೆದ್ದು ಬಂದಿದ್ದರು. ರಾಜೇಶ್ 2ನೇ ಸ್ಥಾನ ಪಡೆದರೆ, ದೇವೇಂದ್ರಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರೂ, 28 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.
2013ರ ಚುನಾವಣೆಯಲ್ಲಿ ರಾಜೇಶ್ ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ, ರಾಮಚಂದ್ರ ಕೆಜೆಪಿಯಿಂದ ಕಣಕ್ಕಿಳಿದಿದ್ದರು. ರಾಜೇಶ್ 37,000 ಮತಗಳ ಭಾರಿ ಅಂತರದಿಂದ ಗೆದ್ದು ಬಂದಿದ್ದರು. ರಾಮಚಂದ್ರ 2ನೇ ಸ್ಥಾನ ಪಡೆಯಬೇಕಾಯಿತು. ಇದೇ ಸಮಯದಲ್ಲಿ ಬಿಜೆಪಿಯ ಅಭ್ಯರ್ಥಿಗೆ 2,000 ಮತ ಕೂಡ ಸಿಕ್ಕಿರಲಿಲ್ಲ. ಬಿಜೆಪಿಗಿಂತ ಎರಡು ಪಟ್ಟು ಮತಗಳನ್ನು ಜೆಡಿಎಸ್ ಪಡೆದಿತ್ತು.